top of page

ಪ್ರತಿ ವರ್ಷ ಕರ್ನಾಟಕದ ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ, ಕನ್ನಡತಿಯರ ಪಾತ್ರವನ್ನು ಮರೆಯದೇ ಸ್ಮರಿಸುವ ಆಶಯದಿಂದ 2017 ರಲ್ಲಿ “ಅವಳ ಹೆಜ್ಜೆ” ಯ ವತಿಯಿಂದ ಪ್ರಾರಂಭಿಸಿದ ವಾರ್ಷಿಕ ಹಬ್ಬ “ಕನ್ನಡತಿ ಉತ್ಸವ”.

ಮೇಲ್ನೋಟಕ್ಕೆ ಎದ್ದು ಕಾಣದಿದ್ದರೂ, ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ ಹಾಸುಹೊಕ್ಕಾಗಿರುವುದನ್ನು ಯಾರೂ ಅಲ್ಲಗಳೆಯಲಾರರು. ಹೀಗಾಗಿ ನಮ್ಮ ಸುತ್ತಮುತ್ತಲಿನ ಮಹಿಳೆಯರ ಕಥೆಗಳನ್ನು, ಅನುಭವಗಳನ್ನು ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ಮೇಲ್ನೋಟಕ್ಕೆ ತರಲು ಒಂದು ವೇದಿಕೆ ಒದಗಿಸುವ ಮತ್ತು ಆ ಮೂಲಕ ಸಮಾನತೆಯತ್ತ ಪುಟ್ಟ ಹೆಜ್ಜೆಗಳನ್ನು ಇಡುವ ಪ್ರಯತ್ನ ನಮ್ಮದು. 2017 ರಿಂದ 2022 ರವರೆಗೆ ನಡೆದ ಕನ್ನಡತಿ ಉತ್ಸವದ ಸಂಕ್ಷಿಪ್ತ ವಿವರಣೆ:

  • ಕನ್ನಡತಿ ಉತ್ಸವ-2017 - “ಕನ್ನಡತಿಯ ಹೆಜ್ಜೆ” ಎಂಬ ಶೀರ್ಷಿಕೆಯಡಿಯಲ್ಲಿ, 3 ದಿನಗಳ ಕಾಲ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯ “ರಂಗೋಲಿ – ಮೆಟ್ರೊ ಆರ್ಟ್ ಸೆಂಟರ್” ನ “ವಿಸ್ಮಯ” ಗ್ಯಾಲರಿಯಲ್ಲಿ ಚಿತ್ರಕಲಾಕೃತಿ, ಕವಿತೆ, ಲೇಖನ, ಕಿರುಚಿತ್ರಗಳು, ಪ್ರದರ್ಶನ ಕಲೆ ಸೇರಿದಂತೆ 40ಕ್ಕೂ ಹೆಚ್ಚು ಕಲಾವಿದೆಯರ ಸ್ತ್ರೀಕೇಂದ್ರಿತ ಕೃತಿಗಳನ್ನು ಪ್ರದರ್ಶಿಸಲಾಗಿತ್ತು.


  • ಕನ್ನಡತಿ ಉತ್ಸವ-2018 - ನನ್ನದೊಂದು ಕಥೆ ಎಂಬ ಶೀರ್ಷಿಕೆಯಡಿಯಲ್ಲಿ ಮಹಿಳೆಯರೇ ತಯಾರಿಸಿದ ಈ ಕೆಳಕಂಡ 7 ಕಿರುಚಿತ್ರಗಳ ಪ್ರದರ್ಶನ, ಚರ್ಚಾಗೋಷ್ಠಿ ಮತ್ತು ಸಂವಾದ ಏರ್ಪಡಿಸಲಾಗಿತ್ತು.

    • ದರೋಜಿ – ರಚನೆ ಹಾಗು ನಿರ್ದೇಶನ, ಸುಗಂಧಿ ಗದಾಧರ

    • ಅಪ್ರಾಪ್ತ – ರಚನೆ ಹಾಗು ನಿರ್ದೇಶನ, ಕ್ಷೇಮಾ ಬಿ ಕೆ

    • ಜೀವನ ರೇಖೆ – ರಚನೆ ಹಾಗು ನಿರ್ದೇಶನ, ಸವಿತಾ ಇನಾಂದಾರ್

    • ಕಾಜಿ – ರಚನೆ ಹಾಗು ನಿರ್ದೇಶನ, ಐಶನಿ ಶೆಟ್ಟಿ

    • ದಾಳಿ – ನಿರ್ದೇಶನ, ಮೇದಿನಿ ಕೆಳಮನೆ

    • ಅನಲ, ನಿರ್ದೇಶನ, ಸಂಜ್ಯೋತಿ ವಿ ಕೆ

    • ಬೆಳ್ಳಿ ತಂಬಿಗೆ – ನಿರ್ಮಾಪಕ ತಂಡ: ಮಹಿಮಾ ಗೌಡ, ಅನುಶ್ರೀ ಭರದ್ವಾಜ, ಹರಿಪ್ರಿಯಾ ಕೆ ರಾವ್, ಶ್ರದ್ಧಾ ಸುಮನ್


ಬೆಂಗಳೂರಿನ ಗಾಂದಿಭವನದಲ್ಲಿ ಯಶಸ್ವಿಯಾಗಿ ಉದ್ಘಾಟಿಸಿ, ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ವಿಜಯಪುರದ ಅಕ್ಕ ಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ, ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಸಹಾ ಪ್ರದರ್ಶನ ಮತ್ತು ಸಂವಾದ ನಡೆಸಲಾಯಿತು.


  • ಕನ್ನಡತಿ ಉತ್ಸವ-2019 - ಸ್ತ್ರೀ ನೋಟ ವಿಷಯಾಧಾರಿತ ಮಹಿಳಾ ಪ್ರಧಾನ, ಮಹಿಳೆಯರಿಂದಲೇ ರಚಿತವಾದ ಮತ್ತು ನಿರ್ದೇಶಿಸಲ್ಪಟ್ಟ ರಾಜ್ಯಮಟ್ಟದ ಅಂತರ-ಕಾಲೇಜು ಕಿರುನಾಟಕ ಸ್ಪರ್ಧೆ ಏರ್ಪಡಿಸಲಾಗಿತ್ತು.


  • ಕನ್ನಡತಿ ಉತ್ಸವ-2020 -  ಅನಿರೀಕ್ಷಿತ ಜಾಗತಿಕ ದುರಂತದ ಹಿನ್ನೆಲೆಯಲ್ಲಿ, ಬಿಕ್ಕಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂಬ ಶೀರ್ಷಿಕೆಯಡಿ ಮಹಿಳಾ ನಾಯಕತ್ವದ ಹಾದಿಯಲ್ಲಿನ ಹಲವಾರು ಸವಾಲುಗಳು ಮತ್ತು ಯಶಸ್ಸುಗಳ ಕುರಿತಂತೆ, ಮೂರು ದಿನಗಳ ವೆಬಿನಾರ್ ಸಮಾವೇಶ ಏರ್ಪಡಿಸಲಾಗಿತ್ತು.

  • ಕನ್ನಡತಿ ಉತ್ಸವ-2021 - "ಆಧುನಿಕ ಬೊಂಬೆ ಹಬ್ಬ" ಶೀರ್ಷಿಕೆಯಡಿಯಲ್ಲಿ ಸಮಕಾಲೀನ ಸಾಧಕಿಯರ ಸ್ಪೂರ್ತಿದಾಯಕ ಕಥೆಗಳನ್ನು ಬೊಂಬೆ ಜೋಡಣೆ ಮೂಲಕ ಪ್ರದರ್ಶನ, ಕಾರ್ಟೂನ್ ಗೊಂಬೆಗಳ ವಿಡಿಯೋ (ಅನಿಮೇಷನ್) ಹಾಗೂ ಮಕ್ಕಳಿಂದ "ನನ್ನ ಮೆಚ್ಚಿನ ಮಹಿಳೆ" ಶೀರ್ಷಿಕೆಯಡಿ ವೇಷಭೂಷಣ ಪ್ರದರ್ಶನ ನಡೆಸುವ ಮೂಲಕ ರಾಯಚೂರಿನಲ್ಲಿ ಆಚರಿಸಲಾಗಿತ್ತು.

  • ಕನ್ನಡತಿ ಉತ್ಸವ-2022 - ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅತ್ಯಂತ ವಿಭಿನ್ನವೂ ವಿನೂತನವೂ ಆದ ʼಮಿಸ್‌ ಮಹಾಲಕ್ಷ್ಮೀʼ ರ್‍ಯಾಂಪ್ ವಾಕ್ ಏರ್ಪಡಿಸಲಾಗಿತ್ತು. ಇದರಲ್ಲಿ ಮಹಿಳೆಯರು ತಮ್ಮ ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ವಿವಿಧ ಉಡುಗೆ ತೊಡುಗೆಗಳ ಮೂಲಕ PASSION SHOW (ಇದು ಫ್ಯಾಷನ್‌ ಶೋ ಅಲ್ಲ, ಪ್ಯಾಷನ್‌ ಶೋ!) ಪ್ರದರ್ಶಿಸಿದರು. ಇದರೊಂದಿಗೆ, ʼಹಳೆ ಬೇರು ಹೊಸ ಚಿಗುರುʼ ಶೀರ್ಷಿಕೆಯಡಿ ಒಂದೇ ಕುಟುಂಬದ ಮಹಿಳೆಯರು - ಅಜ್ಜಿ, ತಾಯಿ, ಮಗಳು, ಮೊಮ್ಮಗಳು ಹೀಗೆ ಹೆಣ್ಣು ತಲೆಮಾರು - ರ‍್ಯಾಂಪ್ ವಾಕ್ ಮೂಲಕ ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದರು.



ʼಅವಳ ಹೆಜ್ಜೆʼ ಯ 6 ನೇ ವಾರ್ಷಿಕ ಹಬ್ಬʼಕನ್ನಡತಿ ಉತ್ಸವʼ ವನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಅತ್ಯಂತ ವಿಭಿನ್ನವೂ ವಿನೂತನವೂ ಆದ ʼಮಿಸ್‌ ಮಹಾಲಕ್ಷ್ಮೀʼ ರ್‍ಯಾಂಪ್ ವಾಕ್ ಮೂಲಕ ಆಚರಿಸಲಾಯಿತು. ಉತ್ಸವದ ನಿರ್ದೇಶಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ದೀಪದಮಲ್ಲಿ ಕಾವ್ಯನಾಮದ ದೀಪಾ ಗಿರೀಶ್ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ನಮ್ಮ ಸಮಾಜದಲ್ಲಿ ಅನೇಕ ಮಹಿಳೆಯರು ಕುಟುಂಬದ ಕಣ್ಣಾಗಿ ಮನೆಯ ಪ್ರತಿಯೊಬ್ಬ ಸದಸ್ಯರ ಆರೋಗ್ಯ, ಶಿಕ್ಷಣ, ವೃತ್ತಿಯನ್ನು ಪೋಷಿಸುತ್ತಾ ಎಲ್ಲರ ಹಿತದೊಳಗೆ ತಮ್ಮ ಸುಖ ಕಾಣುತ್ತಾರೆ. ಇನ್ನೂ ಅನೇಕ ಮಹಿಳೆಯರು ತಮ್ಮ ವೃತ್ತಿ ಹಾಗೂ ಕುಟುಂಬವನ್ನು ಸರಿದೂಗಿಸಿಕೊಂಡು ಹೋಗಲು ಸದಾ ಕಾಲ ಹೋರಾಡುತ್ತಿರುತ್ತಾರೆ. ಇವುಗಳ ಮಧ್ಯೆ ತಮ್ಮ ಕನಸು ಏನು? ತಮ್ಮ ಆಸಕ್ತಿ ಏನು? ತಮ್ಮೊಳಗಿನ ಕಲೆ ಏನು? ಪ್ರವೃತ್ತಿಯೇ ವೃತ್ತಿಯೂ ಆಗಬಹುದೇ? ದಿನನಿತ್ಯದ ಜಂಜಾಟಗಳ ನಡುವೆ ತಮ್ಮ ವೈಯಕ್ತಿಕ ಖುಷಿಗಾಗಿ ಕೆಲವು ಗಂಟೆ ಅಥವಾ ನಿಮಿಷಗಳನ್ನಾದರೂ ತೆಗೆದಿಡಬಹುದೇ? ಇಂತಹ ಹಲವು ಒಳನೋಟಗಳನ್ನು ಕೆದಕುವ ಒಂದು ಪ್ರಯತ್ನವಾಗಿತ್ತು ಈ ʼಮಿಸ್‌ ಮಹಾಲಕ್ಷ್ಮೀʼ ರ್‍ಯಾಂಪ್ ವಾಕ್!


PASSION SHOW – ಇದು ಫ್ಯಾಷನ್‌ ಶೋ ಅಲ್ಲ, ಪ್ಯಾಷನ್‌ ಶೋ!

ಪ್ಯಾಷನ್‌ ಶೋನಲ್ಲಿ 7 ವರ್ಷದಿಂದ ಮೊದಲುಗೊಂಡು 75 ವರ್ಷ ವಯೋಮಾನದವರೆಗಿನ ಮಹಿಳೆಯರು ತಮ್ಮ ತಮ್ಮ ಕನಸು, ಕಸುಬು ಮತ್ತು ಕಲೆಯನ್ನು ಕ್ರಿಯಾಶೀಲವಾಗಿ ವಿವಿಧ ಉಡುಗೆ ತೊಡುಗೆಗಳ ಮೂಲಕ ರ‍್ಯಾಂಪ್ ಮೇಲೆ ಪ್ರದರ್ಶಿಸಿದರು. ವೈದ್ಯೆ, ವಕೀಲೆ, ಫಾರ್ಮಾಸಿಸ್ಟ್, ಕೇಶ ವಿನ್ಯಾಸಕಿ, ಬಾಹ್ಯಾಕಾಶ ವಿಜ್ಞಾನಿ, ವನ್ಯಜೀವಿ ಛಾಯಾಗ್ರಾಹಕಿ, ಸಮಾಜ ಸೇವೆ, ಕಸೂತಿ, ಶಿಕ್ಷಣ, ಫ್ಯಾಷನ್‌ ಡಿಸೈನಿಂಗ್, ಮಾಡಲಿಂಗ್, ಜಿಮ್‌, ಯೋಗ, ಸಾಹಿತ್ಯ, ಗಾಯನ, ಭರತನಾಟ್ಯ, ಕಥಕ್‌, ಯಕ್ಷಗಾನ, ಚಿತ್ರಕಲೆ, ನಾಟಕ, ಟ್ರಕ್ಕಿಂಗ್‌, ಆಭರಣ ವಿನ್ಯಾಸ ಮುಂತಾದ ಕ್ಷೇತ್ರಗಳನ್ನು ಪ್ರತಿನಿಧಿಸಿದರು.


ಇದರೊಂದಿಗೆ, ʼಹಳೆ ಬೇರು ಹೊಸ ಚಿಗುರುʼ ಶೀರ್ಷಿಕೆಯಡಿ ಹೆಣ್ಣು ಸಂತತಿಯ ಮೂರು ನಾಲ್ಕು ತಲೆಮಾರಿನ ಒಂದೇ ಕುಟುಂಬದ ಮಹಿಳೆಯರು - ಅಜ್ಜಿ, ತಾಯಿ, ಮಗಳು, ಮೊಮ್ಮಗಳು ಹೀಗೆ ಹೆಣ್ಣು ತಲೆಮಾರು - ಒಟ್ಟಾಗಿ ರ‍್ಯಾಂಪ್ ಮೇಲೆ ನಡೆದು ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದರು.

ಅವಳಹೆಜ್ಜೆಯ 5ನೇ ವಾರ್ಷಿಕ ಹಬ್ಬ ಕನ್ನಡತಿ ಉತ್ಸವ 2021,ರಾಯಚೂರಿನ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ದಿನಾಂಕ 12/12/2021 ರ ಭಾನುವಾರ ಜರುಗಿತು.


ಅವಳಹೆಜ್ಜೆ ಸಂಸ್ಥೆಯ ರೂವಾರಿ ಶಾಂತಲಾ ದಾಮ್ಲೆಯವರ ನೇತೃತ್ವದಲ್ಲಿ, ರಾಯಚೂರು ಜಿಲ್ಲಾ ಅವಳಹೆಜ್ಜೆ ಘಟಕದ ಕಾರ್ಯಕ್ರಮ ಸಂಯೋಜಕಿ ಗಿರಿಜಾ ಅಕ್ಕಿ ಮತ್ತು ತಂಡದವರು, ಕಾರ್ಯಕ್ರಮದ  ಸಂಪೂರ್ಣ ಜವಾಬ್ದಾರಿ ಹೊತ್ತು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ವಿಯ ಬಾಷುಮಿಯ ಸಾಹುಕಾರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಸುಮಿತ್ರಾ ಪ್ಯಾಟಿಯವರು ವಹಿಸಿದ್ದರು.


ಈ ಬಾರಿಯ ಕನ್ನಡತಿ ಉತ್ಸವದಲ್ಲಿ "ಆಧುನಿಕ ಬೊಂಬೆ ಹಬ್ಬ" ದ ಮೂಲಕ ಸಮಕಾಲೀನ ಸಾಧಕಿಯರ, ಇತಿಹಾಸ ರಚಿಸಿದ ಮಾದರಿ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳನ್ನು ಪ್ರಸ್ತುತಿ ಪಡಿಸಲಾಯಿತು. ಬೊಂಬೆ ಪ್ರದರ್ಶನದ ಮಾಧ್ಯಮಕ್ಕೆ ಯಾವುದೇ ಮಿತಿ ಅಥವಾ ಕಟ್ಟುಪಾಡು ಇರಲಿಲ್ಲ. ಮರದ ಅಥವಾ ಲೋಹದ ಬೊಂಬೆಗಳು, ಮಣ್ಣಿನ ಬೊಂಬೆಗಳು, ಬಳಪದ ಕೆತ್ತನೆ, ರಟ್ಟುಗಳು, ಬಟ್ಟೆಯಿಂದ ತಯಾರಿಸಿದ್ದು, ನೆರಳು-ಬೆಳಕಿನ ಮಾದರಿ, ಸೈನ್ಸ್ ಎಕ್ಸಿಬಿಷನ್ ನಲ್ಲಿ ಬಳಸುವಂತಹ  ಆಧುನಿಕ ತಂತ್ರಜ್ಞಾನ ಮುಂತಾದ ವಿವಿಧ ವಿಧಾನಗಳನ್ನು ಹಾಗೂ ಅನಿಮೇಷನ್/ಕಾರ್ಟೂನ್ ಮಾದರಿಯನ್ನು ಸಹಾ ಬಳಸಲು ಉತ್ತೇಜಿಸಲಾಗಿತ್ತು.


ಬೆಂಗಳೂರಿನ ಪೂಜಾ ಹರೀಶ್ ರವರು ನಿರ್ಮಿಸಿದ ಕಾರ್ಟೂನ್ ಗೊಂಬೆಗಳ ವಿಡಿಯೋ ಡಾಕ್ಯುಮೆಂಟರಿ ಮಲ್ನಾಡಿನ ಭೂಮಿ ಹುಣ್ಣಿಮೆ ಪ್ರದರ್ಶನ ಮತ್ತು ಮಕ್ಕಳಿಂದ "ನನ್ನ ಮೆಚ್ಚಿನ ಮಹಿಳೆ" ಶೀರ್ಷಿಕೆಯಡಿ ಜರುಗಿದ ವೇಷಭೂಷಣ ಪ್ರದರ್ಶನ ಈ ವರ್ಷದ ಕನ್ನಡತಿ ಉತ್ಸವದ ವಿಶೇಷ.


ಆಧುನಿಕ ಬೊಂಬೆ ಹಬ್ಬ ಪ್ರದರ್ಶನದಲ್ಲಿ ಕಲಾವಿದೆ ರಾಜೇಶ್ವರಿ ಕೌಲಗಿಯವರ ಕೈಚಳಕದಲ್ಲಿ ಪ್ರಸ್ತುತ ಪಡಿಸಲಾದ ಬಿಜಾಪುರದ ಮಾದರಿ ಮಹಿಳೆ, ಲಂಬಾಣಿ ಸಮುದಾಯದ ಕಲಾ ಕೌಶಲ್ಯತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಚೆಲ್ಲಿದ, ಹಲವಾರು ಲಂಬಾಣಿ ಸಮುದಾಯದವರಿಗೆ ಸಾಮಾಜಿಕವಾಗಿ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾದ ಮಲ್ಲಮ್ಮ ಯಾಳವಾರ ಅವರ ಕಥೆಯ ಪ್ರಸ್ತುತಿ, ಎಲ್ಲರನ್ನೂ ಪ್ರೇರೇಪಿಸಿತ್ತು.  


ಮಾನ್ವಿ ಕಾಲೇಜು ವಿದ್ಯಾರ್ಥಿನಿಯರು,ದೇವದುರ್ಗ ತಾಲೂಕಿನ ಶಾಲಾ ಮಕ್ಕಳು ಬೊಂಬೆ ಜೋಡಣೆಗಳ ಮೂಲಕ ಹೇಳುವ ಕಥೆಗಳೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.



bottom of page